ಬೆಳಗಾವಿ

ವೀರೇಂದ್ರ ಹೆಗ್ಗಡೆ ಮೇಲಿನ ಷಡ್ಯಂತ್ರ: ‘ನನ್ನ ನಿಲುವಿಗೆ ಜೈನ ಸಮುದಾಯದಿಂದ ಮೆಚ್ಚುಗೆ’ – ಡಿ.ಕೆ.ಶಿವಕುಮಾರ್*

13Views

ಕಷ್ಟಕಾಲದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ರಾಷ್ಟ್ರವ್ಯಾಪಿ ಪ್ರಶಂಸೆ; ಜೈನ ಸಮುದಾಯದ ಜೊತೆ ಸದಾ ಇರುತ್ತೇವೆ ಎಂದ ಡಿಸಿಎಂ
ಬೆಳಗಾವಿ:10.12.2025
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದ ಷಡ್ಯಂತ್ರದ ಸಂದರ್ಭದಲ್ಲಿ ತಾನು ತೆಗೆದುಕೊಂಡ ನಿರ್ಣಯಕ್ಕೆ ಇಡೀ ದೇಶದ ಜೈನ ಸಮುದಾಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಉಪ ಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.
ಆಚಾರ್ಯರತ್ನ ಶ್ರೀ 108 ಬಾಹುಬಲಿ ಮುನಿಮಹಾರಾಜರ 94ನೇ ಜನ್ಮಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
*‘ಯಾವ ಒತ್ತಡಕ್ಕೂ ಮಣಿಯಲಿಲ್ಲ’:*
“ವೀರೇಂದ್ರ ಹೆಗ್ಗಡೆ ಅವರ ಮೇಲೆ ಯಾವ ರೀತಿ ಷಡ್ಯಂತ್ರ ನಡೆದಿತ್ತು ಎಂಬುದನ್ನು ಇಡೀ ದೇಶ ನೋಡಿದೆ. ಆ ಕಷ್ಟಕಾಲದಲ್ಲಿ ನಾವು ಒಂದು ನಿರ್ಧಾರವನ್ನು ತೆಗೆದುಕೊಂಡೆವು. ಈ ನಿರ್ಧಾರವನ್ನು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಮಾಧ್ಯಮಗಳು ಮತ್ತು ಅನೇಕ ರಾಜಕೀಯ ನಾಯಕರುಗಳು ಪ್ರಶ್ನಿಸಿದ್ದರು. ಆದರೆ, ನಾನು ಯಾವುದೇ ಒತ್ತಡಕ್ಕೆ ಮಣಿಯದೆ, ನನ್ನ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ನಿಲುವು ತೆಗೆದುಕೊಂಡಿದ್ದೆ. ದೂರದಾರರೇ ಆರೋಪಿಗಳಾಗಿ ಉಲ್ಲೇಖಿಸಲಾಗಿರುವ ಚಾರ್ಜ್‌ಶೀಟ್ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ‘ನಾನು ಏನು ಹೇಳಬೇಕೋ ಅದನ್ನು ನೀವೇ ವ್ಯಾಖ್ಯಾನಿಸಿ’ ಎಂದಷ್ಟೇ ಉತ್ತರಿಸಿದ್ದೆ,” ಎಂದು ಡಿ.ಕೆ. ಶಿವಕುಮಾರ್‌ ಅವರು ಹಿಂದಿನ ನಿರ್ಣಯವನ್ನು ನೆನಪಿಸಿಕೊಂಡರು.
“ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾನು ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಇಡೀ ದೇಶದ ಜೈನ ಸಮುದಾಯದವರು ‘ನೀವು ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಅವರು ತಿಳಿಸಿದರು.
*ಜೈನ ಸಮುದಾಯದ ಬಗೆಗಿನ ನಿಲುವು:*
ಜೈನ ಧರ್ಮದ ತತ್ವಗಳನ್ನು ಶ್ಲಾಘಿಸಿದ ಡಿಸಿಎಂ, “ಶಾಂತಿ, ಸಹನೆ, ಅಹಿಂಸೆ ಮತ್ತು ತ್ಯಾಗದ ಸಂಕೇತ ಜೈನ ಸಮುದಾಯ. ನಿಮಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದ್ದೂ ಸಹ ಕಾಂಗ್ರೆಸ್ ಸರ್ಕಾರವೇ ಆಗಿದೆ. ಜೈನ ಸಮುದಾಯದ ಜೊತೆಗೆ ನಾನು ಯಾವಾಗಲೂ ಇರುತ್ತೇನೆ. ನೀವು ಜೈನರ ಪದ್ಧತಿ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದೀರಿ. ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎನ್ನುವ ಮಾತಿನ ಮೇಲೆ ನಂಬಿಕೆ ಇಟ್ಟು ಮುನ್ನಡೆಯೋಣ,” ಎಂದು ಕರೆ ನೀಡಿದರು.
ಧಾರ್ಮಿಕ ಸಾಮರಸ್ಯದ ಕುರಿತು ಮಾತನಾಡಿದ ಅವರು, “ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ – ‘ದೇವನೊಬ್ಬ ನಾಮ ಹಲವು’ ಎಂಬ ತತ್ವದಲ್ಲಿ ನಾವು ನಂಬಿಕೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ,” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Leave a Reply