Uncategorized

*ಡಿಸೆಂಬರ್ 13 ರಂದು ವರ್ಷದ ಕೊನೆಯ ಬೃಹತ್ ಲೋಕ ಅದಾಲತ್: 20 ಸಾವಿರ ಪ್ರಕರಣ ಇತ್ಯರ್ಥದ ಗುರಿ*

18Views

ಬೆಳಗಾವಿ:
ಪ್ರಸಕ್ತ ವರ್ಷದ ಕೊನೆಯ ಹಾಗೂ ವರ್ಷದ ನಾಲ್ಕನೇ ಬೃಹತ್ ಲೋಕ ಅದಾಲತ್ ಅನ್ನು ಡಿಸೆಂಬರ್ 13 ರಂದು ಆಯೋಜಿಸಲಾಗಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯಕ್ಕೆ ಬರುವ ಸಾಧ್ಯತೆಯಿರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ತಿಳಿಸಿದರು.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕ ಅದಾಲತ್‌ನಲ್ಲಿ ವಿಶೇಷವಾಗಿ ಹಳೆಯ ಪ್ರಕರಣಗಳು, ಮೋಟಾರು ವಾಹನ ಕಾಯಿದೆ ಪರಿಹಾರ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು (ವೈವಾಹಿಕ ಪ್ರಕರಣಗಳು), ಕ್ರಿಮಿನಲ್ ಪ್ರಕರಣಗಳು ಮತ್ತು ಚೆಕ್ ಅಮಾನ್ಯ (ಚೆಕ್ ಬೌನ್ಸ್) ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಒಟ್ಟು 20 ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಕನಿಷ್ಠ 15 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.
*ತಾಲೂಕು ಮಟ್ಟದಲ್ಲೂ ಲೋಕ ಅದಾಲತ್*
ಜಿಲ್ಲೆಯಾದ್ಯಂತ ಒಟ್ಟು 14 ಕಡೆಗಳಲ್ಲಿರುವ ತಾಲೂಕು ನ್ಯಾಯಾಲಯ ಸಂಕೀರ್ಣಗಳಲ್ಲಿಯೂ ಲೋಕ ಅದಾಲತ್ ನಡೆಯಲಿದೆ. ಸಂಬಂಧಿಸಿದ ಕಕ್ಷಿದಾರರಿಗೆ ಈಗಾಗಲೇ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ಮಾಹಿತಿ ನೀಡಿದರು.
ಕಳೆದ ಬೃಹತ್ ಲೋಕ ಅದಾಲತ್‌ನಲ್ಲಿ 14,500 ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿದ್ದವು. ಇದರ ಜೊತೆಗೆ ನ್ಯಾಯಾಲಯಕ್ಕೆ ಬರಬಹುದಾಗಿದ್ದ 1.50 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ವ್ಯಾಜ್ಯಪೂರ್ವ ಪ್ರಕರಣಗಳು ರಾಜಿಗೆ ಬರುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
*ಸಂಚಾರ ದಂಡ ಪಾವತಿಗೆ ರಿಯಾಯಿತಿ ವಿಸ್ತರಣೆ*
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಹಳೆಯ ಪ್ರಕರಣಗಳ ದಂಡದ ಮೊತ್ತ ತುಂಬುವಲ್ಲಿ ಸರ್ಕಾರ ಘೋಷಿಸಿರುವ ಶೇ.50ರಷ್ಟು ರಿಯಾಯಿತಿಯು ಡಿಸೆಂಬರ್ 12 ರವರೆಗೆ ಇರಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಾಲಯದ ಆವರಣ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಂಡ ಪಾವತಿ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ನ್ಯಾಯಾಧೀಶ ಮಂಜುನಾಥ ನಾಯಕ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ ಪಾಟೀಲ ಅವರು ಉಪಸ್ಥಿತರಿದ್ದರು.

Leave a Reply